Thursday 8 August 2013

ನಾಗರ ಪಂಚಮಿ

                  ಸಡಗರ, ಸಂಭ್ರಮದಿಂದ ನಾಗರ ಪಂಚಮಿ ಆಚರ                     

ಹಬ್ಬಗಳನ್ನು ಹೊತ್ತು ತಂದಿರುವ ನಾಗರ ಪಂಚಮಿ ಹಬ್ಬವನ್ನು ರಾಜ್ಯಾದ್ಯಂತ ಮಹಿಳೆಯರು ಇಂದು  ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬಾಂಧವ್ಯಗಳನ್ನು ಬೆಸೆಯುವ ಹಬ್ಬವೆಂದೇ ಕರೆಯಲಾಗುವ ಪಂಚಮಿ ಹಬ್ಬದಂದು ನಾಗರ  ಪ್ರತಿಮೆ ಹಾಗೂ ಹುತ್ತಕ್ಕೆ  ಹಾಲೆರೆದು ಪೂಜಿಸುತ್ತಿರುವ  ದೃಶ್ಯಗಳು ಸಾಮಾನ್ಯ.  ಬಗೆಬಗೆಯ  ತಂಬಿಟ್ಟು, ಉಂಡೆಗಳ  ನೈವೇದ್ಯ ಸಲ್ಲಿಸುವ ಮೂಲಕ  ವಿಶೇಷ ಪೂಜಾ ಕಾರ್ಯಗಳು ಭರದಿಂದ ನಡೆಯತೊಡಗಿವೆ. *ಮೃತ್ಯುಂಜಯ ಕಲ್ಮಠ ನಾಗರಪಂಚಮಿ ಅಥವಾ ಪಂಚಮಿ ಹಬ್ಬ ವಿಶೇಷವಾಗಿ ಹಾವಿನ ಹುತ್ತಕ್ಕೆ ಹಾಲೆರೆಯುವುದು ಸಂಪ್ರದಾಯ. ಆ ಹಾಲನ್ನು ನಾಗರ ಹಾವು ಸೇವಿಸುತ್ತದೆ ಎನ್ನುವುದು ಬಲವಾದ ನಂಬಿಕೆ. ಈ ಹಬ್ಬವನ್ನು  ಶ್ರಾವಣಮಾಸ ಆರಂಭವಾದ 5ನೇ ದಿನಕ್ಕೆ ಆಚರಿಸುತ್ತಾರೆ. ಆಷಾಢ  ಮಾಸ ಕಳೆದು  ಶ್ರಾವಣ ಮಾಸ ಆರಂಭವಾಗುವ ಮೊದಲ ವಾರದಲ್ಲಿ ಬರುವ ನಾಗರ ಪಂಚಮಿ ಹಬ್ಬವು ನಾಡಿಗೆ ದೊಡ್ಡದು ಎನ್ನುವ ಮಾತಿದೆ. ಈ ಹಬ್ಬವನ್ನು ವಿಶೇಷವಾಗಿ ಮಹಿಳೆಯರ ಹಬ್ಬ ಎಂದು ಬಿಂಬಿಸಲಾಗಿದೆ. ನಾಗರ ಪಂಚಮಿ ದಿನದಂದು ಮಹಿಳೆಯರು  ನಾಗರ  ಪ್ರತಿಮೆಗೆ  ವಿವಿಧ ರೀತಿಯಲ್ಲಿ ಪೂಜಾ ಕಾರ್ಯಗಳನ್ನು ಮಾಡುತ್ತಾರೆ. ಜತೆಗೆ ನೂತನವಾಗಿ ಮದುವೆಯಾಗಿರುವ ಹೆಣ್ಣು ಮಕ್ಕಳು ತವರಿಗೆ ಬಂದು ಪಂಚಮಿ ಹಬ್ಬವನ್ನು ಆಚರಿಸುವುದು ರೂಢಿ. ಈ ಹಬ್ಬವನ್ನು ಸಹೋದರ-ಸಹೋದರಿಯರ ಹಬ್ಬ ಎಂದು ಕರೆಯಲಾಗುತ್ತದೆ. ಇಂದು ತಂಗಿಯರು ತಮ್ಮ ಅಣ್ಣನಿಗೆ ಪ್ರೀತಿಯಿಂದ ಹಾರೈಸುವುದು. ಅಣ್ಣನಾದವನು ತಂಗಿಗೆ ಪ್ರೀತಿಯ ಪ್ರತೀಕವಾಗಿ ಉಡುಗೊರೆ ನೀಡುವುದು ಹಲವು ಕಡೆಗಳಲ್ಲಿ ಕಂಡು ಬರುವ ಆಚರಣೆ. ಜೋಕಾಲಿ ಹಬ್ಬ ಇನ್ನು ಉತ್ತರ ಕರ್ನಾಟಕದ ಕಡೆಗೆ ಈ ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸುತ್ತಾರೆ. ಪಂಚಮಿ ಹಬ್ಬ ಜೋಕಾಲಿ ಹಬ್ಬವೆಂದೇ ಜನಜನಿತವಾಗಿದೆ. ಈ ಹಬ್ಬವನ್ನು 3 ರಿಂದ 5 ದಿನಗಳವರೆಗೆ ಆಚರಿಸಲಾಗುತ್ತಿದೆ. ವಿಶೇಷ ಪೂಜಾ ಕೈಂಕರ್ಯಗಳು ಎಲ್ಲಡೆ ಸರ್ವೆಸಾಮಾನ್ಯ. ಇದರ ಜತೆಗೆ ಈ ಸಂಭ್ರಮದಲ್ಲಿ ಮನೆಯಲ್ಲಿ ಜೋಕಾಲಿ ಕಟ್ಟಿ ಜೀಕುವುದು ವಿಶಿಷ್ಟ. ಇಂದು ಪ್ರತಿ ಮನೆಯಲ್ಲಿ ಜೋಕಾಲಿಯನ್ನು ಕಾಣಬಹುದು. ಇದರ ಜತೆಗೆ ಪುರುಷರು ಕೂಡಾ ನಾವೇನು ಕಮ್ಮಿಯಿಲ್ಲ ಎನ್ನುವ ಹಾಗೆ, ಮರಕ್ಕೆ ಜೋಕಾಲಿ ಕಟ್ಟಿ  ಜೀಕುವುದು, ಜೀಕುವಿಕೆಗೆ ಜೂಜು ಕಟ್ಟುವುದು. ಗುರಿ ಮುಟ್ಟುವುದು. ಹೀಗೆ ಅನೇಕ ಮನರಂಜನೆಗಳು ಹಬ್ಬದ ಪ್ರಯುಕ್ತ ನಡೆಯುತ್ತವೆ. ಹಬ್ಬಕ್ಕೆ ವಿಶೇಷವಾಗಿ ವಿವಿಧ  ರೀತಿಯ ಉಂಡೆಗಳನ್ನು ಮಾಡಿರುತ್ತಾರೆ. ಶೇಂಗಾ ಉಂಡೆ, ಎಳ್ಳುಂಡೆ, ಕಡ್ಲಿ ಉಂಡೆ, ತಂಬಿಟ್ಟು, ಬೇಳೆ ಕಡಬು,  ಬೂಂದಿ ಉಂಡೆ, ಡಾಣಿ ಉಂಡೆ ಹೀಗೆ ಬಗೆಬಗೆಯ ರುಚಿಕರ ತಿಂಡಿತಿನಿಸುಗಳು  ಸವಿಯುವ ಮೂಲಕ ಹಬ್ಬವನ್ನು ವಿನೂತನವಾಗಿ ಆಚರಿಸುತ್ತಾರೆ. ಶ್ರಾವಣಮಾಸದಲ್ಲಿ  ಬರುವ ಐದು ಶನಿವಾರಗಳು ಹಿಂದುಗಳಿಗೆ ವಿಶೇಷವಾಗಿದ್ದು, ಶ್ರಾವಣ ಶನಿವಾರ ಈ ಮಾಸದ ವಿಶೇಷವಾಗಿದೆ. ಮಂಗಳಗೌರಿ ವ್ರತ  ಮಂಗಳವಾರ ಪ್ರಾರಂಭವಾಗಿದೆ. ಮದುವೆಯಾಗಿ 5 ವರ್ಷಗಳವರೆಗೆ ಮಹಿಳೆಯರು ಈ ಪೂಜೆಯ ವ್ರತವನ್ನು ಈ ತಿಂಗಳ ಎಲ್ಲ ಮಂಗಳವಾರ ಕೈಗೊಳ್ಳುತ್ತಾರೆ. ಮಂಗಳಗೌರಿ ವ್ರತಾಚರಣೆಗೆ ದೇವಿ ಗೌರಿ  ಮೂರ್ತಿಯನ್ನು ಅರಿಶಿಣ ಪುಡಿಯಲ್ಲಿ ಮಾಡಿ ಭಕ್ತಿ ಶ್ರದ್ಧೆಗಳಿಂದ  ಪೂಜಿಸುತ್ತಾರೆ. ಈ ಪೂಜೆಯನ್ನು ನವವಿವಾಹಿತೆಯರು ಹೆಚ್ಚಾಗಿ ಮಾಡುತ್ತಾರೆ. ಆ. 15ಕ್ಕೆ ವರಮಹಾಲಕ್ಷ್ಮಿ ಮಹಾವ್ರತವನ್ನು ಆಚರಿಸಲಾಗುತ್ತದೆ.  ಲಕ್ಷ್ಮಿ  ಪೂಜೆಯಿಂದ ಸಂಪತ್ತು ವೃದ್ದಿಯಾಗುತ್ತದೆ ಎನ್ನುವ ನಂಬಿಕೆಯಿದೆ.  ಹಬ್ಬಗಳ ಸಾಲುಸಾಲನ್ನು ನಾಗರಪಂಚಮಿ ಹೊತ್ತು ತಂದಿದೆ. ಸಂಭ್ರಮದಿಂದ ಬರಮಾಡಿಕೊಳ್ಳಿ. ಶ್ರಾವಣದ ಸಂಭ್ರಮಕ್ಕೆಒಂದಿಷ್ಟು ರುಚಿಕರ ತಿನಿಸುಗಳು
Read more at: http://kannada.oneindia.in/festivals/shravana/2008/0806-nag-panchami-karnataka-festival.html